Saturday, December 01, 2012

......ಧರಿತ್ರಿ.....

ಉದ್ಭವಿಸಿದೆ ಮಹಾ ಸ್ಫೋಟದಲ್ಲಿ
ಸ್ಫೋಟಿಸಿತು ಜೀವ ಸಂಕುಲವು ನನ್ನ ಗರ್ಭದಿಂದ
ಹೊತ್ತೆ, ಹೆತ್ತೆ, ಹಲವಾರು ಮಕ್ಕಳನ್ನು 
ಬಲಶಾಲಿಗಳನ್ನ... ಒಂದೊಂದೂ... ಮುತ್ತು
ದಾರಿಯನ್ನು ಸವೆಸದೆ, ಹೋದವು ಹತ್ತು ಹಲವು ಸತ್ತು....
 
ಇತ್ತೊಂದು ನನ್ನಲ್ಲಿ ಅದಮ್ಯ ಆಸೆ
ಒಂದು ಚೇತನಕ್ಕೆ
ಎರೆದೆ ನನ್ನದೆಲ್ಲವನ್ನು ಧಾರೆ
ಒಂದು ಬೀಜಕ್ಕೆ
ಇಟ್ಟೆ ಅದನ್ನು ಜೀವಸಂಕುಲದ ತುತ್ತ ತುದಿಯಲ್ಲಿ
ಎಲ್ಲರನು ಪೊರೆಯಲಿ ಎಂದು ...

 
ಆಯಿತು ನಾ ಕಂಡ ಭರವಸೆ ಹುಸಿ
ಹೊರಟಿದ್ದಾನೆ ಸಂಕುಲದ ನಿರ್ನಾಮಕ್ಕೆಂದು
ಹಾಕುತ್ತಿರುವನು ನನ್ನ ಗರ್ಭಕ್ಕೆ ಕೈಯನ್ನು 
ಸಾಕಾಗಿದೆ ನನಗಿನ್ನು;
ಇಲ್ಲ ತಾಳ್ಮೆ
ಕಾಯುತಿರುವೆನು ದಾರಿ
ಮತ್ತೊಂದು ಮಹಾಸ್ಫೋಟ ಎಂದು?

Monday, November 05, 2012

ಮಂಥನ!

ಮಥಿಸಬೇಕು ಅಂತರಂಗ 
ಕಟ್ಟುವುದು ಆಗಲೇ ಅಲ್ಲವೇ ಕೆನೆ 
ನಂತರ ಮಾತ್ರವೇ ಮೊಸರು -ಬೆಣ್ಣೆ 
ಮಥಿಸಿದಾಗಲೇ ಕ್ಷೀರ ಸಾಗರ
ಉಗಮಿಸಿಹುದು ಹಾಲು - ಹಾಲಾಹಲ
ಉಳಿಯೇಟಿನಿಂದಲೇ ಮೂರುತಿ
ಆಗುವುದು ಸುಂದರ, ಪಡೆವುದು ಕೀರುತಿ
ನಿರಂತರ ಮಂಥನವೀ  ಜೀವನ
ಸಿಗುವುದಿಲ್ಲಿ ದಿನವೂ ಹಾಲು - ಹಾಲಾಹಲ! 

Thursday, October 13, 2011

ಕಾಡುವ ಕಹಿ ನೆನಪುಗಳು

ಓಡಿ ಹೋಗಲೇ ನಾನು?
ಕಹಿ ನೆನಪು ಗಳಿಂದ ದೂರ ದೂರ
ಬೆನ್ನಟ್ಟಿ ಹಿಂಬಾಲಿಸಿ , ಘೀಳಿಟ್ಟು
ಮಾಡುವವಿವು ಕೂರಂಬುಗಳಿಂದ ಗದಾಪ್ರಹಾರ

ಏನು ಮಾಡಲಿ ನಾನು ?
ನನ್ನ ಮನಸ್ಸಿದು ಮೃದುಭಾಷಿಣಿ
ಇದಕ್ಕಿಲ್ಲ ರಕ್ಷಣೆ ಕೋಟೆ ಕೊತ್ತಳಗಳಿಂದ
ಇರುವುದೊಂದು ಬೇಲಿ , ಅದೂ ಪಾಳು

ಮರೆತು ಬಿಡಲೇ ನಾನು ಎಲ್ಲ ?
ಮಾಡಬೇಕಾಗಿದೆ ನಾನು ಜೋಪಾನ
ಈ ನನ್ನ ಭಾವವನ್ನು
ಅದರಲ್ಲಿರುವ ಪಸೆ ಆರಿ ಹೋಗುವ ಮುನ್ನ

Saturday, July 16, 2011

ಎಂಥಾ ಗೋಳಾಟ

ಶಾಲಾ ದಿನಗಳು ಆವು .. ರಜಾ ದಿನಗಳಲ್ಲಿ ಊರಿಗೆ ಹೋಗೋ ಸಡಗರ ಹೇಳತೀರದು ...
ಊರಿಗೆ ಹೋದಮೇಲೆ ಕೇಳ್ತೀರಾ.. ಸಂಜೆವರೆಗೂ ಆಟ .. ಆಮೇಲೆ ಶ್ಲೋಕ ... ಕಥೆ .. ಹಾಡು .. ಹಸೆ ಇತ್ಯಾದಿ..
ಹೀಗೆ ನಮ್ಮಕ್ಕಂದಿರು ಹೇಳಿಕೊಟ್ಟಂತ ಒಂದು ಹಾಡು.. ಆಗಲೇ ಚನ್ನಾಗಿ ಕಂಠಪಾಠ ಮಾಡಿದ್ದೆ..
ಸ್ಕೂಲಿನಲ್ಲಿ ಅಂತು ಇದು "world famous" ಆಗಿತ್ತು ... "once more once more" ಅಂತ ಹಾಡಿಸುತ್ತಿದ್ದರು.
ಇದನ್ನು ನಾನು ಆಗಿನ ಕಾಲಕ್ಕೆ ಭದ್ರಾವತಿಯ ಆಕಾಶವಾಣಿ ಕೇಂದ್ರದಲ್ಲೂ ಹಾಡಿದ್ದೆ...
ಹೀಗೆ ಕೂತಾಗ ಹಾಡು ಜ್ಞಾಪಕಕ್ಕೆ ಬಂತು.. ಅಲ್ಲಲ್ಲಿ ಮರೆತು ಹೋಗಿತ್ತು
ಅಪ್ಪ ಹಾಗು ಅತ್ತೆಯ ತಲೆ ತಿಂದು ಇಲ್ಲಿ ಬರೆದಿದ್ದೀನಿ ..
ಇದನ್ನು ಬರೆದವರು ಯಾರು ಅಂತ ಗೊತ್ತಿಲ್ಲ .. ಗೊತ್ತಿದ್ದರೆ ತಿಳಿಸಿ ..


"
ಎಂಥಾ ಗೋಳಾಟ ಇದು ಎಂಥಾ ಗೋಳಾಟ
ಶನಿವಾರ ಮುಂಜಾನೆ ಶಾಲೆಗೆ ಹೋಗೋದು
ಎಂಥ ಗೋಳಾಟ ಇದು ಎಂಥಾ ಗೋಳಾಟ

ಕಣ್ಣ ತುಂಬಾ ನಿದ್ದೆ ಇದ್ದರು , ಆರಕೆ ನಾನೆದ್ದೆ
ಮೋರೆ ತೊಳೆಯಲು ಬಚ್ಚಲಿಗೋದೆ, ಅಲ್ಲೇ ಜಾರಿ ಬಿದ್ದೆ , ಅಲ್ಲೇ ಜಾರಿ ಬಿದ್ದೆ
ಹಾಯ್ ಹಾಯ್ ಹಾಯ್ , ದೇವರೇ ಕಾಯ್
ಮೈ ಕೈ ಎಲ್ಲ ಗಾಯ್ ಗಾಯ್ ಗಾಯ್
ತಂಬಿಗೆ ಬಿದ್ದು ತಾಯಿಯು ಬಂದು
ಉದ್ಧಾರಾದೆ ನಾನು....
ಎಂಥಾ ಗೋಳಾಟ ......

ಬಿಸಿ ಬಿಸಿ ಉಪ್ಪಿಟ್ ಮುಂದೆ ಬಂದರು
ಹೇಗೋ ನಾ ತಿಂದೆ
ಗಬ ಗಬ ತಿನ್ನಲು ಗಂಟಲಿಗೇರಿ
ಕೂತಿತು ಕರಿಬೇವು ಕಡ್ಡಿ ,ಕೂತಿತು ಕರಿಬೇವು ಕಡ್ಡಿ
ಛೆ ಛೆ ಏನು ಅಸಹ್ಯ .. ಮೈ ಕೈ ಎಲ್ಲ ಮುಸುರೆ ಅಸಹ್ಯ್
ಅಣ್ಣನು ಬಂದು ಗುದ್ದಲು ನಂಗೆ .. ಬೇಡೆಂದು ಒಳಗೋದೆ ನಾನು ....
ಎಂಥಾ ಗೋಳಾಟ ......

ಸಾಡೆ ಸಾತು ಆಗೆಬಿಟ್ಟಿತು .. ಶಾಲೆಗೆ ಹೊತ್ತಾಯ್ತು ..
ಗಡಿಬಿಡಿಯಿಂದ ಹೊರಟೆ ಬಿಟ್ಟೆ .. ಪೆನ್ನೇ ಮರೆತುಹೋಯ್ತು .. ಪೆನ್ನೇ ಮರೆತುಹೋಯ್ತು ..
ಟ್ರಿನ್ ಟ್ರಿನ್ ಟ್ರಿನ್, ಪೊಂ ಪೊಂ ಪೊಂ
ಸೈಕಲ್ ಮೋಟರ್ ಸೊಯ್ ಸೊಯ್ ಸೊಯ್
ಅತ್ತಿಂದಿತ್ತ ಓಡೋದರ ಒಳಗೆ ಕಿತ್ತಿತು ಚಪ್ಪಲ್ ಬಾರು
ಎಂಥಾ ಗೋಳಾಟ ......

ಅಂತು ಶಾಲೆಗೆ ಬಂದೆ .. ಟೀಚರ್ ಸಾರಿ ಎಂದೆ
ಓದುವ ಸರದಿ ಬಂದಿತು ಎಂದು, ಬ್ಯಾಗಿನ ಬಾಯ್ ತೆರೆದೇ .. ಬ್ಯಾಗಿನ ಬಾಯ್ ತೆರೆದೇ ..
ಛಿ . .. ಛಿ .... ಛಿ .... ಏನು ಅಸಹ್ಯ...
ಬ್ಯಾಗಿನ ತುಂಬಾ ತುಂಬಿದೆಯೂ
ತಂಗಿಯ ಕುಂಚಿಗೆ .. ತಮ್ಮನ ಟೊಪ್ಪಿಗೆ ....
ನನ್ನ ಚಪ್ಪಲ್ ಬಾರು .....
ಎಂಥಾ ಗೋಳಾಟ ......

"

ಅಂದಹಾಗೆ ಈ ಹಾಡನ್ನು ಜಾನಿ ವಾಲ್ಕರ್ ರವರ "Tel Malish " ಚಿತ್ರದ "ಸರ್ ಜೋ ತೇರ ಚಕ್ರಯೇ " ಹಾಡಿನ ಧಾಟಿಯಲ್ಲಿ ಹಾಡಬೇಕು

Friday, June 10, 2011

ದೊಡ್ಡ ಸಂಪಿಗೆ

ಬಿಳಿಗಿರಿ ವನಕ್ಕೆ ಹೊರಟಾಗ.. ನನಗೂ ಬಹಳ ಕುತೂಹಲ ಇತ್ತು..
ಬಾಲಣ್ಣ ಹೇಳಿದ್ರು.. ದೊಡ್ಡ ಸಂಪಿಗೆ... ಇದು ನೀವು , ಒಮ್ಮೆ ನೋಡಲೇ ಬೇಕಾದ ಸಂಗತಿ ಅಂತ..

ತುಂಬಾ ದೊಡ್ಡ ಮರ ಅಂತೆ.. ಸಾವಿರಾರು ವರ್ಷ ಹಳೆಯದಂತೆ..
ಜಮದಗ್ನಿ ತಪಸ್ಸು ಮಾಡಿದ್ದನಂತೆ...
ಮುಗಿಲು ಮುಟ್ಟುವ ಹಾಗೆ ಮರ ಇದೆಯಂತೆ..
ಮರದಲ್ಲಿ ೩ ತರಹದ ಹೂವುಗಳು ಬಿಡ್ತಾವಂತೆ...
ಅಂತೆ ಕಂತೆ ಗಳ ಸರಮಾಲೆಗಳು ತಲೆಯಲ್ಲಿ ಇದ್ದವು...



ನಿಂತೆ ಮರದ ಮುಂದೆ.. ಅಲ್ಲ... ಅಲ್ಲ.. ಹೆಮ್ಮರದ ಮುಂದೆ..
ಅಬ್ಬಾ .. ಏನು ಅಗಾಧ, ಎಷ್ಟು ಎತ್ತರ .......ಭಾರೀ ವಿಸ್ತೀರ್ಣ...
ಸರಿ ಸುಮಾರು ಇಪ್ಪತ್ತು ಆಳುಗಳು ಬೇಕು... ಮರವನ್ನು ಸುತ್ತುವರಿಯಲಿಕ್ಕೆ..
ಮರದ ಕೆಳಗೆ ಸಣ್ಣ ಬಿಂದುವಾದೆ ... ಕುಬ್ಜನಾದೆ ... ಕಳೆದುಹೋದೆ ...

ಸೋಲಿಗರು ಇಂದಿಗೂ ಮರವನ್ನು ಪೂಜಿಸುತ್ತಾರೆ..
ಸೋಲಿಗರ ಆರಾಧ್ಯ ದೈವ ದೊಡ್ಡ ಸಂಪಿಗೆ..
ಗೊರುಕನ ಹಾಡು ಶುರುವಾಗುವುದೇ ದೊಡ್ಡ ಸಂಪಿಗೆಯ ಸ್ತುತಿಯಿಂದ ..
ಮರದ ಕೆಳೆಗೆ ಹಲವಾರು ಲಿಂಗಗಳು .. ತ್ರಿಶೂಲಗಳು ಇವೆ..
ಪೂಜೆ ಪುನಸ್ಕಾರಗಳು ಇಂದಿಗೂ ನಡೆಯುತ್ತವೆ..


ಅಲ್ಲಿಯೇ ಪಕ್ಕದಲ್ಲಿ ಭಾರ್ಗವಿ... ಜುಳು ಜುಳು ಎಂದು ಮಂದಗಮನೆ ಯಾಗಿ ಹರಿಯುತ್ತಿದ್ದಾಳೆ..
ಅಕ್ಕ, ಪಕ್ಕ ಪಕ್ಷಿಗಳ ಕಲರವ, ಮನಸ್ಸಿಗೆ ಮುದ ಕೊಟ್ಟಿತು ...
ಮನಸ್ಸು ನಿಸರ್ಗದ ಸೃಷ್ಟಿಗೆ ಒಂದು ದೊಡ್ಡ ಥ್ಯಾಂಕ್ಸ್ ಹೇಳುತ್ತಾ... ಹಾಡನ್ನು ಗುನುಗುನಿಸುತ್ತ ....ಅಲ್ಲಿಂದ ಹೊರಟೆ .



"ಸಂಪಿಗೆ ಮರದ ಚಿಗುರೆಲೆ ನಡುವೆ ಕೋಗಿಲೆ ಹಾಡಿತ್ತು.......
ಅದ ಕೇಳಿ ನಾ ಮೈ ಮರೆತೇ...
ಸ್ವರ ಒಂದು ಆಗಲೇ ಕಲಿತೆ...
ನಾ ಹಾಡಿದೆ.. ಈ ಕವಿತೆ.. ನಾ ಹಾಡಿದೆ ಈ ಕವಿತೆ..... "

ಕೆಲವು ಸಂಗತಿಗಳು:
ದೊಡ್ದಸಂಪಿಗೆ ಮರವು ಬಿಳಿಗಿರಿ ರಂಗನ ಬೆಟ್ಟ ಹಾಗು ಕೆ. ಗುಡಿ (ಕ್ಯಾತ ದೇವನ ಗುಡಿ) ಮಾರ್ಗ ಮಧ್ಯದಲ್ಲಿ ಬರುತ್ತದೆ. ಇಲ್ಲಿಗೆ ತಲುಪಲು ಅರಣ್ಯ ಇಲಾಖೆಯ ಅನುಮತಿ ಅತ್ಯಗತ್ಯ.
ATREE, ಬೆಂಗಳೂರು ; ಇವರ ಇತ್ತೀಚಿನ ಸಂಶೋಧನೆಯ ಪ್ರಕಾರ ಮರವು ಸುಮಾರು ೨೭೦೦ ವರುಷಗಳಷ್ಟು ಹಳೆಯದು ಎಂದು ಕಂಡು ಹಿಡಿದ್ದಾರೆ
ಮರವು ಸುಮಾರು ೩೪ ಮೀಟರ್ ನಷ್ಟು ಎತ್ತರ ಹಾಗು ೨೦ ಮೀಟರ್ ನಷ್ಟು ಪರಿಧಿ ಹೊಂದಿದೆ. (ಆಧಾರ : ಇಂಟರ್ನೆಟ್ )

Tuesday, May 24, 2011

ಭಂಡನಾಗಿರಬೇಕು............

ಭಂಡನಾಗಿರಬೇಕು ಜಗದೊಳಗೆ
ಇರಬೇಕು ಎಮ್ಮೆ ಚರ್ಮ
ಇದ್ದರೆ ಸಾಕು ಕರ್ಚೀಫುಗಳು
ಮುಖವನ್ನು ಒರೆಸಿಕೊಳ್ಳಲು
ಭಾವನೆಗಳು ಯಾರಿಗೂ ಬೇಕಾಗಿಲ್ಲ
ಕೇಳೋದಂತು ಇಲ್ಲವೇ ಇಲ್ಲ
ಕಳೆದು ಹೋಗಿದೆ ಅಂತಃಕರಣ
ಸತ್ತುಹೋಗಿದೆ ಮನಸ್ಸಾಕ್ಷಿ
...
ಭಂಡನಾಗಿರಬೇಕು ಜಗದೊಳಗೆ
ಜಗ "ಭಂಡ" ನಾದರೆ ಎಷ್ಟು ಚನ್ನ !!!!



ವಿ ಸು: ನನ್ನ ಪ್ರಥಮ ಪ್ರಯತ್ನ ... ಸುತ್ತಲೂ ನಡೆಯುತ್ತ ಇರುವುದನ್ನ ನೋಡಿ ಬರೆದಿದ್ದು .. ನೋಡಿ , ತಿದ್ದಿ , ತೀಡಿ, ಪ್ರೋತ್ಸಾಹಿಸಿ .....

Saturday, April 30, 2011

ಬಾಳ್ ಕನ್ನಡ ತಾಯ್

ಅಂದು ನವಂಬರ್ ೧ , ಶಿವು ಇನ್ನು ಮುಂದೆ ಪ್ರತಿ ವರ್ಷದ ರಾಜ್ಯೋತ್ಸವದ ದಿನದಂದು ಮನೆಯ ಮೇಲೆ ಬಾವುಟ ಹಾರಿಸಬೇಕೆಂದು ತೀರ್ಮಾನಿಸಿದ್ದ, ಆಗಿನ್ನೂ ಮದುವೆಯ ಹೊಸತು! ಗೌರಿ ಗಂಡನ ಕನ್ನಡಾಭಿಮಾನವನ್ನು ಕಂಡು ಹೆಮ್ಮೆ ಪಟ್ಟಿದ್ದಳು, ಇಬ್ಬರೂ ಸೇರಿ ಒಂದು ದೊಡ್ಡ ಗಳಕ್ಕೆಬಾವುಟ ಕಟ್ಟಿ, ಹಾರಿಸಿ ಸಿಹಿ ಹಂಚಿ ಸಂತೋಷ ಪಟ್ಟಿದ್ದರು. ವಿವಿಧ ಭಾರತಿಯಲ್ಲಿ " ಏರಿಸಿ ಹಾರಿಸಿ ಕನ್ನಡದ ಬಾವುಟ ......." ಮೊಳಗುತ್ತಿತ್ತು .
............... ............... ...................
ಅಂದು ಪ್ರಣವನ ಶಾಲೆಯಲ್ಲಿ ಒಂದು ಕಾರ್ಯಕ್ರಮ, ಬೇಗ ಎದ್ದು ಧಾವಂತ ಮಾಡಿಕೊಂಡು ಇಬ್ಬರೂ ಶಾಲೆಗೆ ಹೊರಟರು. ಶಹರದಲ್ಲಿ ಇಂಗ್ಲಿಷ್ ಶಾಲೆಗಳ ಭರಾಟೆ, ಹಳ್ಳಿಯಲ್ಲಿ ಈ ಖಾಸಗಿ ಶಾಲೆ ಶುರುವಾಗಿ ಇನ್ನೂ ಹೊಸತು, ಕಾರ್ಯಕ್ರಮ ಭಾರಿ ಚನ್ನಾಗಿಯೇ ನಡೆದಿತ್ತು, ಶಾಲೆಯ ಟ್ರಸ್ಟಿಗಳಲ್ಲಿ ಒಬ್ಬನಾದ ನಾಯ್ಡು ದಂಪತಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದ. ಶಾಲೆಯಲ್ಲಿ ಪ್ರಣವ ಗೌರಿ ಹೇಳಿಕೊಟ್ಟಂತೆ "ಏರಿಸಿ ಹಾರಿಸಿ ..........." ಗೀತೆಯನ್ನು ಅಚ್ಚುಕಟ್ಟಾಗಿ ಒಪ್ಪಿಸಿದ್ದ.
....................................................
ನಾಯ್ಡು ಆ ದಿನ ದೇಶಾವರಿ ನಗೆ ಬೀರುತ್ತ ಮನೆಗೆ ಬಂದ, "ಶಿವಣ್ಣ ನಾನು ಎಲೆಕ್ಷನ್ ಗೆ ನಿಂತಿದ್ದೇನೆ , ನಂಗೇ ನಿಮ್ದು ವೋಟು " ಹಿಂದೆ ಒಂದು ಭಾರಿ ದೊಡ್ಡ ಪಟಾಲಂ .. ಎದುರುಗಡೆ ಸುಪರ್ ಸ್ಟೋರ್ ನ ಮಾಲೀಕ ಜಾರ್ಜ್ ಹಾಗು ಹಿಂದುಗಡೆ ಬೀದಿಯ ಬಟ್ಟೆ ಅಂಗಡಿಯ ಮೆಹತ ಜೊತೆಗಿದ್ದರು. ಭಾರೀ ಅಬ್ಬರದ ಪ್ರಚಾರ , ಧೂಮ್ ಧಾಮ್ ಎಂದು ಎಲೆಕ್ಷನ್ ಮುಗಿದೇ ಹೋಯ್ತು, ನಾಯ್ಡು ಆರಿಸಿ ಬಂದದ್ದು ಆಯ್ತು.

ಶಾಲೆಯ ಮೈದಾನದಲ್ಲಿ ಆ ದಿನ ಸಂಭ್ರಮದ ಆಚರಣೆ!! ರಾಜ್ಯೋತ್ಸವದ್ದಾ ಅಥವಾ ನಾಯ್ಡುವಿನ ಗೆಲುವಿನ ಸಂಭ್ರಮದ ಆಚರಣೆಯೂ ಶಿವುವಿಗೆ ಗೊತ್ತಾಗಲಿಲ್ಲ. ನಮಗೆ ಅದರ ಉಸಾಬರಿ ಯಾಕೆ ಎಂದು ಶಿವಣ್ಣ ಹಾಗು ಗೌರಿ ಕಾರ್ಯಕ್ರಮಕ್ಕೆ ಗೈರು ! ನಾಯ್ಡುವಿನ ಭಾಷಣದಲ್ಲಿ ಕನ್ನಡದ ಕಗ್ಗೊಲೆ ಆಗುತ್ತಿತ್ತು. ಇಬ್ಬರೂ ಪ್ರಣವನೊಂದಿಗೆ, ಧ್ವಜ ಹಾರಿಸಿ ಒಳಗೆ ಬಂದು ಟಿವಿ ನೋಡುತ್ತ ಕುಳಿತರು. ಅಶ್ವತ್ಥ್ ಮತ್ತು ವೃಂದದಿಂದ "ಏರಿಸಿ ಹಾರಿಸಿ ......" ಸುಶ್ರಾವ್ಯವಾಗಿ ಕೇಳಿ ಬರುತ್ತಿತ್ತು .
............................................
ಹಳ್ಳಿಯು ಹೋಗಿ ಒಂದು ಯದ್ವಾತದ್ವ ಬೆಳೆದ ಬಡಾವಣೆ ಆಗಿತ್ತು, ಆ ದಿನ ಶಿವೂ ಗೊಣಗುತ್ತಿದ್ದ , ಮುದ್ದಾಗಿ ಇದ್ದ ಹೆಸರನ್ನು ತುಂಡಿಸಿದ್ದರು. ಬಡಾವಣೆಯ ಹೆಸರು " K D extension" ಅಂತ ಆಗಿತ್ತು , ಅನ್ಯಭಾಷಿಕರ ನಾಲಿಗೆ ಹೊರಳದೆ !! ಶಿವುಗೆ ಊರು
ಬೇಜಾರಾಗಿತ್ತು!! ಸುತ್ತಲೂ ವಾಹನಗಳ ಭರಾಟೆ ! ಸ್ವಲ್ಪಹೊತ್ತು ಮಾತಾದೋಣ ಅಂದ್ರೆ ಅಕ್ಕ ಪಕ್ಕದ ಮನೆಯವರು ಹೊರಗೆ ಬರೋದೇ ಇಲ್ಲ!! ಸುತ್ತಾಡಿ ಬರೋಣ ಅಂತ ಹೊರಟರೆ , ಪರಿಚಯಸ್ಥರು ಸಿಗೋದೆ ಕಡಿಮೆ !! ರಾಮಣ್ಣ , ಪಾಲಾಕ್ಷಪ್ಪ ಊರು ಬಿಟ್ಟು ತುಂಬಾ ದಿನ ಆಗಿತ್ತು.. ತನ್ನ ಮನೆಯಲ್ಲೇ ಶಿವೂ ಪರಕೀಯನಾಗಿದ್ದ.
.........................................
ಪ್ರಣವನಿಗೆ ದೊಡ್ಡ ಕೆಲಸ! ಕೈ ತುಂಬಾ ಸಂಬಳ .. ಇಲ್ಲೇ ಬಂದು ಇದ್ದುಬಿಡು ಎಂದು ಕರೆಯುತ್ತಿದ್ದ, ಕೊನೆಗೂ ಶಿವೂ , ಗೌರಿ ತೀರ್ಮಾನಿಸಿದರು .. ಹೋಗೋಣ ಎಂದು ! ಎಲ್ಲವನ್ನು ಖಾಲಿ ಮಾಡಿಕೊಂಡು !!
ಪ್ರಣವ ಎಲ್ಲವನ್ನು ಹೊರ ಗುತ್ತಿಗೆ ಕೊಟ್ಟು ಬಿಟ್ಟಿದ್ದ ... ಐದಾರು ಆಳುಗಳು ಬಂದು ಎಲ್ಲವನ್ನು ಲಾರಿ ಯಲ್ಲಿ ಹಾಕಿಕೊಂಡು ಭರ್... ಎಂದು ಹೋದರು..

ಆ ದಿನವೂ ನವೆಂಬರ್ ೧, ಅವತ್ತು ಶಿವು ಬಾವುಟ ಹಾರಿಸಲಿಲ್ಲ, ಪ್ರಣವನ ಕಾರಿನಲ್ಲಿ ಪಯಣ ಸಾಗುತ್ತಿತ್ತು ! ರೇಡಿಯೋ ನಲ್ಲಿ ಜಾಕಿಗಳದ್ದೆ ಭರಾಟೆ ! ಇಂಗ್ಲಿಷ್ ಮಿಶ್ರಿತ ಹರುಕು ಮುರುಕು ಕನ್ನಡದಲ್ಲಿ ಅವರ ಮಾತುಗಳು ನಾಗಲೋಟದಲ್ಲಿ ಸಾಗಿದ್ದವು!
ಜಾಕಿಯು ಉಲಿದಳು, " ಯು ಅರ್ ಲಿಸೆನಿಂಗ್ ಟು ಬಿಂದಾಸ್ ಚಾನಲ್ ! ಟುಡೇ ಕನ್ನಡ ರಾಜ್ಯೋತ್ಸವ.... ಈಗ ಕೇಳಿ..

ಏರಿಸಿ ... ಹಾರಿಸಿ.. ಕನ್ನಡದ ಬಾವುಟ.. "