Sunday, March 27, 2011

ಮ್ಯಾಚ್ ಫಿಕ್ಸಿಂಗ್

ಮುನ್ನುಡಿ : ಕ್ರಿಕೆಟ್ ಬಗ್ಗೆ ಬರೀತಾ ಇದ್ದೀನಿ ಅಂತ ಅಂದುಕೊಂಡ್ರ! ಖಂಡಿತ ಇಲ್ಲ.... ಒಂದು ಘಟನೆ ಮುಂದೆ ಇಡುತ್ತಿದ್ದೇನೆ .........

ಮನೆಯಲ್ಲಿ ಯಾಕೋ ಇವತ್ತು ಪಿರಿಪಿರಿ ತುಂಬಾ ಜಾಸ್ತಿ,
ಒಂದು ವಿಷಯಕ್ಕೆ ಅಪ್ಪ ಮತ್ತು ನನ್ನ ಮಧ್ಯ ವಾದ ವಿವಾದ ನಡೆದಿತ್ತು.

"ಅಲ್ಲ, ನನ್ನ ಮಾತು ನೀವು ಯಾಕೆ ಕೇಳೋಲ್ಲ ಅಂತೀನಿ,
ಮೊನ್ನೆ ತಾನೇ ಆಪರೇಷನ್ ಆಗಿದೆ, ನಾಡಿದ್ದು ಪೂಜೆ ಮಾಡಬೇಕು ಅಂತೀರಾ,
ಮೊದ್ಲೇ ಶುಗರ್ರು, ಬಿಪಿ ಜಾಸ್ತಿಯಾಗಿದೆ ಈ ಸಂದರ್ಭದಲ್ಲಿ ಇವೆಲ್ಲ ಬೇಕಿತ್ತಾ ಅಂತ......
ಪಾಂಕ್ತವಾಗಿ ಮಾಡೋದು ಏನು ಬೇಡ .. "

"ನೀನು ಸುಮ್ಮನೆ ಇರಯ್ಯ , ನಂಗೆ ತಿಳುವಳಿಕೆ ಹೇಳೋಕ್ಕೆ ಬರಬೇಡ,
ಕಳೆದ ೬೦ ವರ್ಷ ದಿಂದ ಮಾಡ್ತಾ ಬಂದಿದ್ದೀನಿ,
ಅದು ಹ್ಯಾಗೆ ಬಿಡೋಕೆ ಆಗತ್ತೆ , ನೀನೇನೋ ಸಣ್ಣದಾಗಿ ಮಾಡಿ ಮುಗಿಸು ಅಂತ ಇದ್ದೀಯ ..
ಅವೆಲ್ಲ ಆಗುಲ್ಲ ... ನಾನು ಮಾಡಿಯೇ ಸಿದ್ಧ .. ನೀನು ತೆಪ್ಪಗಿರು ..." ಅಂತ ಕಡ್ಡಿ ಮುರಿದ ಹಾಗೆ ಹೇಳಿ ಬಿಟ್ರು....

ಆಫೀಸ್ಗೆ ರಂಪ ಮಾಡ್ಕೊಂಡು ಹೊರಟೆ...
ಹೋಗ್ತಾ ಒಂದು ಯೋಚನೆ ಬಂತು ಕಣ್ಣಿನ ಡಾಕ್ಟರಗೆ ಫೋನಾಯಿಸಿದೆ ...
ಡಾಕ್ಟರ ನಿಭಾಯಿಸೋಣ ಬಿಡಿ .. ಏನೂ ಯೋಚನೆ ಮಾಡಬೇಡಿ ಅಂತ ಹೇಳಿದ್ಮೇಲೆ ಮನಸ್ಸು ಸ್ವಲ್ಪ ನಿರಾಳ ಆಯ್ತು.
ಆಫೀಸ್ ಮುಗಿಸಿ ಮನೆಗೆ ಬಂದೆ. ಅಪ್ಪ ಹಾಲಲ್ಲಿ ಕೂತಿದ್ರು,
ಬೆಳಗಿನ ಸಿಟ್ಟು ಇನ್ನೂ ಮುಖದಲ್ಲಿ ರಾರಾಜಿಸುತ್ತಿತ್ತು
ಯಜಮಾನತಿಗೆ ಒಂದು ಲೋಟ ನೀರು ತರ ಹೇಳಿ ಕುಳಿತೆ

"ಡಾಕ್ಟರ ಫೋನ್ ಮಾಡಿದ್ರು, ಬೆಳಿಗ್ಗೆ, ಆರೋಗ್ಯ ವಿಚಾರಿಸಿಕೊಂಡರು"
" ಹು.... ಏನಂದ್ರು "
"ಇನ್ನೊಂದು ವಾರ ಫುಲ್ ರೆಸ್ಟ್ ಅಂತೆ , ಹೆಚ್ಚಿಗೆ ಆಯಾಸ ಮಾಡ್ಕೊಕ್ಬೇಡಿ ಅಂದ್ರು"
" ಹು.... ಸರಿ "
"ಹೆಚ್ಚು ತ್ರಾಸು ಬೇಡಾಂತ.. "
"ಹು .... ಈಗ "
" ಸ್ವಲ್ಪ ಸಣ್ಣದಾಗಿ ಮಾಡಿ ಮುಗಿಸ್ತೀನಿ "
ಡಾಕ್ಟರಗೆ ಮನದಲ್ಲಿಯೇ ವಂದನೆ ಹೇಳಿ ಗಟಗಟನೆಂದು ನೀರು ಕುಡಿದೆ.

Sunday, March 20, 2011

ಕಗ್ಗಾಡಿನಲ್ಲೊಂದು ಕಲ್ಲು

ಯಥಾಪ್ರಕಾರ ವಾರ್ಷಿಕ "ಕಾಡಿನ" ತೀರ್ಥಯಾತ್ರೆಗೆ ಹೊರಟಾಗ,
ಬಾಲು ಈ ಬಾರಿ ನಿಮಗೆ ಒಂದು ಅಪರೂಪದ ಕಲ್ಲು ತೋರಿಸ್ತೀನಿ ಅಂತ ಅಂದ್ರು ,
ನಂಗೆ ತುಂಬಾ ಕುತೂಹಲ !!
ಹೋಗ್ತೀರೋದು ಕಗ್ಗಾಡಿಗೆ.. ಅಲ್ಲಿ ಈ ಅಸಾಮಿ ಏನು ತೋರಿಸ್ತಾರೋ ಏನೋ ಅಂತ !

ಬುರುಡೆ ಅರಣ್ಯದಿಂದ ಬೆಳಗ್ಗೆನೆ ಹೊರಟೆವು, ದಟ್ಟಾರಣ್ಯದ ದಾರಿ ಸವೆದು ಮೇಲೆಬಂದರೆ
ಅಲ್ಲೇ ಒಂದು ಬಿರ್ಲಾ ರವರ ಕಾಫಿ ಎಸ್ಟೇಟ್ ,
ಈ ಟಾಟಾ, ಬಿರ್ಲಾ ರವರು ಎಲ್ಲೆಲ್ಲೋ ಅಸ್ತಿ ಮಾಡಿ ಇಟ್ಟಿದ್ದಾರೆ ಮಾರಾಯ್ರೆ ,
ಎಸ್ಟೇಟ್ ದಾಟಿ ಹಾಗೆ ಮೇಲೆ ಬಂದರೆ ಸಿಗುವುದೇ ಹೊನ್ನಮೇಟಿ ಬೆಟ್ಟ.
ಏನಪ್ಪಾ ವಿಶೇಷ ಅಂದ್ರೆ, ಬೆಟ್ಟದ ಮೇಲೊಂದು ಏಕಶಿಲಾ ಕಲ್ಲು
ಕಲ್ಲನ್ನು ಜೋರಾಗಿ ಕುಟ್ಟಿದಾಗ ಹೊರ ಹೊಮ್ಮುತ್ತದೆ ಥರಾವರಿ ನಾದ ,
ನಿಸರ್ಗವೇ ಹಾಗೆ, ತನ್ನ ಗರ್ಭದಲ್ಲಿ ಎಷ್ಟೋ ಅಚ್ಚರಿಗಳನ್ನು ತುಂಬಿ ಕೊಂಡಿರುತ್ತದೆ ಅಲ್ವಾ?
ಇಲ್ಲಿ ನೋಡಿ , ದಟ್ಟಾರಣ್ಯ ಮಧ್ಯದಲ್ಲಿ ಒಂದು ನಿಸರ್ಗದ ವಿಸ್ಮಯ ,
ಹಾಗೆ ನೋಡಿದರೆ ಸುತ್ತ ಮುತ್ತಲೂ ಹಲವಾರು ಕಲ್ಲುಗಳಿವೆ , ಅವುಗಳಿಗೆ ಇಲ್ಲ ಈ ಭಾಗ್ಯ .

ಸೋಲಿಗರು ಈ ಕಲ್ಲಿನ್ನಲ್ಲಿ ಚಿನ್ನ ಇರುವುದೆಂದು ನಂಬಿರುತ್ತಾರೆ . ಸ್ಥಳ ಪುರಾಣದ ಪ್ರಕಾರ ಬಿಳಿಗಿರಿ ರಂಗನಾಥ ಸ್ವಾಮಿಯು ಮೆಟ್ಟಿದ್ದ ನೆಲವಾದ್ದರಿಂದ "ಹೊನ್ನ" "ಮೆಟ್ಟಿ" ಅಥವಾ "ಮೇಟಿ" ಎಂಬ ಹೆಸರು ಬಂದಿದೆ.
ಕಲ್ಲಿನ ಬಗ್ಗೆ ಯೋಚಿಸುತ್ತಿರುವಾಗ ,
ಹಂಪಿಯ ವಿಜಯ ವಿಠಲ ದೇವಸ್ಥಾನದ "ಸರಿಗಮಪ" ಕಂಬಗಳು ನೆನಪಿಗೆ ಬರುತ್ತವೆ
ಕಲ್ಲಿಗೆ ಹೇಗೆ ಬಂತು ಈ ಗುಣ ಎಂದು ಅಂತರ್ಜಾಲ ತಾಕಿಸಿದಾಗ ಸಿಕ್ಕಿದ್ದು ಇಷ್ಟು.
ಕೆಲವು ಬಗೆಯ "granite" ಗಳಿಗೆ ಈ ಗುಣ ಇರುತ್ತದೆಂದು ,
ಈ ಕಲ್ಲನ್ನು ಒಂದು ನಿರ್ದಿಷ್ಟ ಬಗೆಯಲ್ಲಿ ತಾಕಿಸಿದಾಗ , ತರಂಗಗಳು ಹೊರಹೊಮ್ಮುತ್ತದೆಂದು ತಿಳಿಯಿತು.
ಹೊನ್ನಮೇಟಿ ಎಸ್ಟೇಟ್ ತನಕ ದಿನವು ಒಂದು ಬಸ್ಸು ಬಂದು ಹೋಗುತ್ತದೆ,
ಬಾಕಿ ಕಲ್ಲಿನ ತನಕ ಚಾರಣ ಮಾಡಬೇಕು,
ಸ್ವಂತ ಗಾಡಿ ಇದ್ರೆ ಒಳ್ಳೇದು ,
ಸಾಧ್ಯವಾದರೆ ಬಿಳಿಗಿರಿ ರಂಗನ ಬೆಟ್ಟಕ್ಕೆ ಹೋದಾಗ ಇಲ್ಲಿಯೂ ಒಮ್ಮೆ ಭೇಟಿ ಕೊಡಿ.