ಕಟ್ಟುವುದು ಆಗಲೇ ಅಲ್ಲವೇ ಕೆನೆ
ನಂತರ ಮಾತ್ರವೇ ಮೊಸರು -ಬೆಣ್ಣೆ
ಮಥಿಸಿದಾಗಲೇ ಕ್ಷೀರ ಸಾಗರ
ಉಗಮಿಸಿಹುದು ಹಾಲು - ಹಾಲಾಹಲ
ಉಳಿಯೇಟಿನಿಂದಲೇ ಮೂರುತಿ
ಆಗುವುದು ಸುಂದರ, ಪಡೆವುದು ಕೀರುತಿ
ನಿರಂತರ ಮಂಥನವೀ ಜೀವನ
ಸಿಗುವುದಿಲ್ಲಿ ದಿನವೂ ಹಾಲು - ಹಾಲಾಹಲ!
ನಿಂತೆ ಮರದ ಮುಂದೆ.. ಅಲ್ಲ... ಅಲ್ಲ.. ಹೆಮ್ಮರದ ಮುಂದೆ..
ಅಬ್ಬಾ .. ಏನು ಅಗಾಧ, ಎಷ್ಟು ಎತ್ತರ .......ಭಾರೀ ವಿಸ್ತೀರ್ಣ...
ಸರಿ ಸುಮಾರು ಇಪ್ಪತ್ತು ಆಳುಗಳು ಬೇಕು... ಮರವನ್ನು ಸುತ್ತುವರಿಯಲಿಕ್ಕೆ..
ಮರದ ಕೆಳಗೆ ಸಣ್ಣ ಬಿಂದುವಾದೆ ... ಕುಬ್ಜನಾದೆ ... ಕಳೆದುಹೋದೆ ...
ಸೋಲಿಗರು ಇಂದಿಗೂ ಮರವನ್ನು ಪೂಜಿಸುತ್ತಾರೆ..
ಸೋಲಿಗರ ಆರಾಧ್ಯ ದೈವ ದೊಡ್ಡ ಸಂಪಿಗೆ..
ಗೊರುಕನ ಹಾಡು ಶುರುವಾಗುವುದೇ ದೊಡ್ಡ ಸಂಪಿಗೆಯ ಸ್ತುತಿಯಿಂದ ..
ಮರದ ಕೆಳೆಗೆ ಹಲವಾರು ಲಿಂಗಗಳು .. ತ್ರಿಶೂಲಗಳು ಇವೆ..
ಪೂಜೆ ಪುನಸ್ಕಾರಗಳು ಇಂದಿಗೂ ನಡೆಯುತ್ತವೆ..
ಅಲ್ಲಿಯೇ ಪಕ್ಕದಲ್ಲಿ ಭಾರ್ಗವಿ... ಜುಳು ಜುಳು ಎಂದು ಮಂದಗಮನೆ ಯಾಗಿ ಹರಿಯುತ್ತಿದ್ದಾಳೆ..
ಅಕ್ಕ, ಪಕ್ಕ ಪಕ್ಷಿಗಳ ಕಲರವ, ಮನಸ್ಸಿಗೆ ಮುದ ಕೊಟ್ಟಿತು ...
ಮನಸ್ಸು ನಿಸರ್ಗದ ಸೃಷ್ಟಿಗೆ ಒಂದು ದೊಡ್ಡ ಥ್ಯಾಂಕ್ಸ್ ಹೇಳುತ್ತಾ... ಹಾಡನ್ನು ಗುನುಗುನಿಸುತ್ತ ....ಅಲ್ಲಿಂದ ಹೊರಟೆ .
"ಸಂಪಿಗೆ ಮರದ ಚಿಗುರೆಲೆ ನಡುವೆ ಕೋಗಿಲೆ ಹಾಡಿತ್ತು.......
ಅದ ಕೇಳಿ ನಾ ಮೈ ಮರೆತೇ...
ಸ್ವರ ಒಂದು ಆಗಲೇ ಕಲಿತೆ...
ನಾ ಹಾಡಿದೆ.. ಈ ಕವಿತೆ.. ನಾ ಹಾಡಿದೆ ಈ ಕವಿತೆ..... "ಕೆಲವು ಸಂಗತಿಗಳು:
ದೊಡ್ದಸಂಪಿಗೆ ಮರವು ಬಿಳಿಗಿರಿ ರಂಗನ ಬೆಟ್ಟ ಹಾಗು ಕೆ. ಗುಡಿ (ಕ್ಯಾತ ದೇವನ ಗುಡಿ) ಮಾರ್ಗ ಮಧ್ಯದಲ್ಲಿ ಬರುತ್ತದೆ. ಇಲ್ಲಿಗೆ ತಲುಪಲು ಅರಣ್ಯ ಇಲಾಖೆಯ ಅನುಮತಿ ಅತ್ಯಗತ್ಯ.
ATREE, ಬೆಂಗಳೂರು ; ಇವರ ಇತ್ತೀಚಿನ ಸಂಶೋಧನೆಯ ಪ್ರಕಾರ ಮರವು ಸುಮಾರು ೨೭೦೦ ವರುಷಗಳಷ್ಟು ಹಳೆಯದು ಎಂದು ಕಂಡು ಹಿಡಿದ್ದಾರೆ
ಮರವು ಸುಮಾರು ೩೪ ಮೀಟರ್ ನಷ್ಟು ಎತ್ತರ ಹಾಗು ೨೦ ಮೀಟರ್ ನಷ್ಟು ಪರಿಧಿ ಹೊಂದಿದೆ. (ಆಧಾರ : ಇಂಟರ್ನೆಟ್ )
ಆಗುಂಬೆಯ ದೊಡ್ಡಮನೆ
ಬೆಂಗಳೂರಿನಿಂದ ಡ್ರೈವ್ ಮಾಡಿಕೊಂಡು ಸುಸ್ತಾಗಿ ಆಗುಂಬೆ ತಲುಪಿದಾಗ ಮಧ್ಯಾನ್ಹವಾಗಿತ್ತು. ಹೋದ ಕೂಡಲೇ ಒಂದು ಆತ್ಮೀಯ ನಗೆ, ಕಷಾಯದ ಸ್ವಾಗತ, ಒಂದಷ್ಟು ಪರಿಚಯದ ಮಾತು. ಕಷಾಯವಂತು ತುಂಬಾ ಸೊಗಸಾಗಿತ್ತು. ನಾವಿಬ್ಬರು ಇನ್ನು ದಿನವೂ ಕಾಫಿ , ಟೀ ಬದಲಿಗೆ ಕಷಾಯವನ್ನೇ ಕುಡಿಯುವುದೆಂದು ತೀರ್ಮಾನಿಸಿದೆವು. ನಂತರ ಮನೆಯಲ್ಲಿ ಕಳೆದ ಮೂರು ದಿನಗಳೂ ಅವಿಸ್ಮರಣೀಯ!!! ಬೆಳಗ್ಗೆ ಏಳುವುದೇ ತಡ , ಕಷಾಯ ರೆಡಿ, ನಂತರ ತಿಂಡಿಯ ಸಮಯ, ಮಧ್ಯ ಒಂದು ಕಷಾಯ ಬ್ರೇಕ್ , ನಂತರ ಸವಿ ಸವಿಯ ಊಟ , ಹಾಗೆಯೆ ಅಡ್ಡಾಡಿಕೊಂಡು ಬಂದರೆ ಸಂಜೆಗೆ ಒಂದಷ್ಟು ತಿಂಡಿ, ಮತ್ತೆ ರಾತ್ರಿಯ ಭೋಜನ. ನೀರು ದೋಸೆ, ಪತ್ರೊಡೆ, ಮಜ್ಜಿಗೆ ಹುಳಿ, ಥರವಾರಿಯ ಚಟ್ನಿಗಳು, ಪಲ್ಯಗಳು ವಾಹ್!!! ದಿನವೂ ಕಸ್ತೂರಕ್ಕ ಬಗೆ ಬಗೆಯ ಭಕ್ಷ ಭೋಜ್ಯಗಳನ್ನು ಮಾಡಿ ತಿನ್ನಿಸುತ್ತಿದ್ದರು. ನನಗಂತೂ ದಿನವೂ ರಸಗವಳ.
ನಿಜ ಹೇಳಬೇಕೆಂದರೆ , ಈ ತರಹದ treatment ಒಂದು Homestayನಲ್ಲಿ ನಾನಂತು ನಿರೀಕ್ಷಿಸಿಯೇ ಇರಲಿಲ್ಲ, ನಾವಿಬ್ಬರು ಅಲ್ಲಿ ಮನೆಯವರೇ ಆಗಿಬಿಟ್ಟಿದ್ದೆವು. ದೊಡ್ಡಮನೆಯ ಕಸ್ತೂರಕ್ಕ ಹಲವಾರು ವರುಷಗಳಿಂದ ಪ್ರವಾಸಿಗರಿಗೆ / ಬಂದವರಿಗೆ ಪ್ರತಿಫಲದ ಅಪೇಕ್ಷೆಯೇ ಇಲ್ಲದೆ ಊಟ ಉಪಚಾರ ಮಾಡುತ್ತಾರೆ, ಕೆಲವೊಂದು ಸಂಧರ್ಭಗಳಲ್ಲಿ ಮಧ್ಯರಾತ್ರಿಯಲ್ಲೂ ಮಾಡಿದ್ದೂ ಉಂಟು. ಇದರ ಬೇರು ಹುಡುಕಿಕೊಂಡು ಹೊರಟಾಗ, ಕಸ್ತೂರಕ್ಕ ಹೇಳಿದ್ದು, ಒಮ್ಮೆ ಅವರು ಸಂಸಾರದೊಂದಿಗೆ ಪ್ರವಾಸ ಹೊರಟಾಗ, ಅನುಭವಿಸಿದ ತಾಪತ್ರಯಗಳು , ಕಷ್ಟಗಳನ್ನು ಕಂಡು, ಇವೆಲ್ಲ ಬೇರೆಯವರಿಗೂ ಬರದಿರಲಿ ಎಂದು ಆಗುಂಬೆಯಂತ ಗ್ರಾಮದಲ್ಲಿ (once ) ಈ ಕಾಯಕವನ್ನು ಮುಂದುವರೆಸಿದ್ದಾರೆ. ದೊಡ್ದಮನೆಯಲ್ಲಿ ಯಾವುದೇ ಹೊತ್ತಿನಲ್ಲಿ ಯಾರೇ ಹೋದರೂ, ಹಾಗೆಯೆ ಯಾರನ್ನು ಕಳುಹಿಸಿರದ ಹಲವಾರು ನಿದರ್ಶನಗಳಿವೆ, ಆಗುಂಬೆಯ ಕಗ್ಗಾಡಿನಲ್ಲಿ ಇದರ ಅವಶ್ಯಕತೆಯೂ ಕೂಡ ಇದೆ ಅನ್ನಿ!
ಕಸ್ತೂರಕ್ಕನ ಮನೆಯಲ್ಲಿ ನಿತ್ಯ ದಾಸೋಹ. ಹಲವಾರು ಬಡ ಮಕ್ಕಳು ಮನೆಯಲ್ಲಿಯೇ ವಾರಾನ್ನ ಮಾಡಿಕೊಂಡು ಓದುತ್ತಿದ್ದಾರೆ. ಇನ್ನು ಹಲವಾರು ಮಕ್ಕಳು ಅಲ್ಲೇ ಹತ್ತಿರದ ಹಾಸ್ಟೆಲ್ ನಲ್ಲಿ ಇದ್ದುಕೊಂಡು ತಿಂಡಿ ಊಟಗಳಿಗೆ ಮನೆಗೆ ಬಂದು ಹೋಗುತ್ತಾರೆ. ಉದ್ದೇಶ ಇಷ್ಟೇ! ವಿಧ್ಯಾಭ್ಯಾಸ ಮಾಡಲು ಅನುಕೂಲ ಇರದಿರುವ ಸುತ್ತ ಮುತ್ತಲಿನ ಅನೇಕರಿಗೆ ಅನುಕೂಲ ಕಲ್ಪಿಸಬೇಕು, ಮಕ್ಕಳು ಓದಲು, ಬೆಳೆಯಲು ಅವಕಾಶ ಮಾಡಿ ಕೊಡಬೇಕು ಎನ್ನುವುದು. ಇಷ್ಟನ್ನು ಕೂಡ ಕಸ್ತೂರಕ್ಕ ಎಲೆ ಮರೆಯ ಕಾಯಿಯ ಹಾಗೆ ಕಾಯಕ ಮಾಡಿಕೊಂಡು ಹೋಗುತ್ತಿದ್ದಾರೆ. ಇದು ಅವರ ಮಾನವೀಯತೆಯ ಇನ್ನೊಂದು ಮುಖ.
ಕಸ್ತೂರಕ್ಕನ ಈ ಕೆಲಸಕ್ಕೆ ಮನೆಯವರೆಲ್ಲರ ಸಹಕಾರವಿದೆ. ಕಸ್ತೂರಕ್ಕನ ತಾಯಿಯಿಂದ, ಮಗಳು, ಅಳಿಯ ಮತ್ತು ಮೊಮ್ಮಕ್ಕಳ ವರೆಗೂ ಎಲ್ಲರೂ ಕೆಲಸದಲ್ಲಿ ಕೈಜೋಡಿಸುತ್ತಾರೆ ಮತ್ತೆ ತುಂಬಾ ಶ್ರದ್ದೆಯಿಂದ ಮತ್ತು ಅತೀವ ಆಸಕ್ತಿಯಿಂದ ಮಾಡುತ್ತಾರೆ. ಕಸ್ತೂರಕ್ಕ ಮತ್ತು ಕುಟುಂಬಕ್ಕೆ ಭಗವಂತ ಇನ್ನು ಹೆಚ್ಚಿನ ಆಯುರಾರೋಗ್ಯಗಳನ್ನು ಕೊಟ್ಟು, ಈ ಕಾಯಕ ಮುಂದುವರೆಯಲಿ ಎಂದು ಹಾರೈಸುತ್ತೇನೆ.
ಬೇಂದ್ರೆ ಟ್ರಸ್ಟ್
ಬೇಂದ್ರೆ ಟ್ರಸ್ಟ್ ನಡೆಸುತ್ತಿರುವ ಭವನದಲ್ಲಿ ವರಕವಿಯವರ ಕೆಲವೊಂದು ಅಪೂರ್ವ ಛಾಯಾಚಿತ್ರಗಳು ಕಾಣಸಿಗುತ್ತವೆ. ಬೇಂದ್ರೆ ಅಜ್ಜನ ಕೆಲ ಛಾಯಾಚಿತ್ರಗಳು ಅವಿಸ್ಮರಣೀಯ!!! ವರಕವಿಯ ಆಯ್ದ ಕೆಲವು ಕವನಗಳ ಭಾವ ಬಿಂಬಿಸುವಂತೆ ತೆಗೆದ ಛಾಯಾಚಿತ್ರಗಳು ತುಂಬಾ ಚನ್ನಾಗಿವೆ. ಇಲ್ಲಿ ವರಕವಿಯು ಪಡೆದ ಪದವಿಗಳನ್ನು ಕೂಡ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಕನ್ನಡ ಸಾರಸ್ವತ ಲೋಕದ ಹಾಗು ಕರ್ನಾಟಕ ಏಕೀಕರಣದ ರೂವಾರಿಗಳೊಂದಿಗೆ ಬೇಂದ್ರೆ ಅಜ್ಜನ ಫೋಟೋ ನೋಡಿದ ಮೇಲೆ ಅಲ್ಲಿಗೆ ಹೋಗಿದ್ದು ಸಾರ್ಥಕ ಅನಿಸಿತು. ಮೇಲೆ ಇರುವ ಗ್ರಂಥಾಲಯದಲ್ಲಿ ಟ್ರಸ್ಟ್ ನಿಂದ ಪ್ರಕಟಣೆಗೊಂಡ ಕೆಲವು ಪುಸ್ತಕಗಳನ್ನು ಕೊಳ್ಳಬಹುದು. ನಾವುಗಳು ಬೇಂದ್ರೆಯವರ ಸಾಹಿತ್ಯವನ್ನು ಕೇಳಿದಾಗ, ಅಲ್ಲಿಯ ಹಸನ್ಮುಖ ಸಿಬ್ಬಂದಿ ನಮ್ಮನ್ನು ಪಕ್ಕದಲ್ಲೇ ಇರುವ ಬೇಂದ್ರೆ ಯವರ ಮನೆಗೆ ಕರೆದೊಯ್ದರು.
ವರಕವಿಯ ಮನೆ ಹಾಗು ವಾಮನ ಬೇಂದ್ರೆ ( ಚಿತ್ರಕೃಪೆ : ನರಸಿಂಹ)
ವರಕವಿಯು ವಾಸಿಸುತ್ತಿದ್ದ ಮನೆ ಈಗಲೂ ಹಾಗೆಯೆ ಇದೆ. ನಮ್ಮ ಭಾಗ್ಯವೇನೂ ಎಂಬಂತೆ ಡಾ. ವಾಮನ ಬೇಂದ್ರೆಯವರು ಆ ದಿನ ಮನೆಯಲ್ಲಿಯೇ ಇದ್ದರು. ಈ ಇಳಿ ವಯಸ್ಸಿನಲ್ಲಿ ನಮ್ಮನ್ನು ತುಂಬಾ ಆತ್ಮೀಯವಾಗಿ ಸ್ವಾಗತಿಸಿ, ಚೂರು ಸಕ್ಕರೆಯನ್ನು ಬಾಯಿಗೆ ಇಟ್ಟು, ವರಾಂಡದ ಅಲಮೇರಗಳಲ್ಲಿ ಜೋಡಿಸಿಟ್ಟಿರುವ ಹಲವು ಪುರಸ್ಕಾರಗಳು, ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಜ್ಞಾನಪೀಠ ಪ್ರಶಸ್ತಿಗಳನ್ನ ಪರಿಚಯಿಸಿದರು. ಬೇಂದ್ರೆಯವರ ಸಾಹಿತ್ಯ ಇಲ್ಲಿ ಕೊಂಡು ಕೊಳ್ಳಲು ಲಭ್ಯ, ತುಂಬಾ ಆತ್ಮೀಯತೆಯಿಂದ ಮಾತನಾಡಿಸಿದ ವಾಮನ ಬೇಂದ್ರೆ ಯವರು ನಮ್ಮ ಕುಶಲೋಪರಿಗಳನ್ನು ವಿಚಾರಿಸಿಕೊಂಡರು. ಸುಮಾರು ಪುಸ್ತಕಗಳನ್ನು ಕೊಂಡುಕೊಂಡು ವಾಪಸ್ ಹೊರಟ ನಮಗೆ ವಾಮನ ಬೇಂದ್ರೆಯವರು ವರಕವಿಯವರ ಒಂದೊಂದು ಛಾಯಾಚಿತ್ರವನ್ನು ಉಡುಗೊರೆಯಾಗಿ ಕೊಟ್ಟರು. ಆ ಹಿರಿಯ ಚೇತನಕ್ಕೊಮ್ಮೆ ನಮಸ್ಕರಿಸಿ ಹೊರಟ ನಮಗೆ ಮನಸ್ಸಿನ ತುಂಬಾ ಬೇಂದ್ರೆಯವರೇ ತುಂಬಿಕೊಂಡಿದ್ದರು.